ಪ್ರೆಸ್ಟೀಜ್ ಒತ್ತುವರಿ ಪ್ರಕರಣ: ದೇವನಹಳ್ಳಿ ತಹಶೀಲ್ದಾರ್ ಅಮಾನತು
A NEWS REPORT –
ಬೆಂಗಳೂರು: ದೇವನಹಳ್ಳಿಯಲ್ಲಿನ ಸರ್ಕಾರಿ ಭೂಮಿಯನ್ನು ಪ್ರೆಸ್ಟೀಜ್ ಕಂಪನಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ದೇವನಹಳ್ಳಿ ತಹಶೀಲ್ದಾರ್ ಕೇಶವಮೂರ್ತಿ ಅವರನ್ನು ಅಮಾನತುಗೊಳಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಪ್ರೆಸ್ಟೀಜ್ ಕಂಪನಿ ದೇವನಹಳ್ಳಿಯಲ್ಲಿ 5.1 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿ. ಅದರಲ್ಲಿ ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಿದ ಆರೋಪ ಎದುರಿಸುತ್ತಿದೆ. ಈ ವಿಷಯವನ್ನು ಇಂದು ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಪ್ರಸ್ತಾಪ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಒಂದು ವಾರದೊಳಗಾಗಿ ತೆರವುಗೊಳಿಸಲಾಗುತ್ತದೆ ಎಂದು ಹೇಳಿದರು.
ಕುಂದಾಣಿ ಹೋಬಳಿ, ಕೋಟ್ಟಿಗೆ ತಿಮ್ಮನಹಳ್ಳಿ, ಸೊಣ್ಣೇನಹಳ್ಳಿ, ಕಾರಳ್ಳಿ, ಅಮಾನಿಕೆರೆ, ತೈಲಗೆರೆ ಗ್ರಾಮಗಳಲ್ಲಿ ಬಿ ಖರಾಜು 5.1 ಎಕರೆ ಸರ್ಕಾರಿ ಜಮೀನನ್ನು ಪ್ರೆಸ್ಟೀಜ್ ಕಂಪನಿಯವರು ಅಕ್ರಮವಾಗಿ ಒತ್ತುವರಿ ಮಾಡಿದ್ದು, ಪ್ರತಿ ಎಕರೆ ಭೂಮಿ 10 ರಿಂದ 15 ಕೋಟಿ ಬೆಲೆ ಬಾಳುತ್ತದೆ. ಇದಲ್ಲದೆ ಕೆಲ ಬಿಲ್ಡರ್ ಗಳು ಕೂಡ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡಲೇ ತೆರವುಗೊಳಿಸಬೇಕೆಂದು ಶಾಸಕ ಆಗ್ರಹಿಸಿದ್ದರು.