BRAVERY AWARD WINNER MASTER S.S.MANOJ WISH TO DONATE 50% OF THE AWARD MONEY FOR A SOCIAL CAUSE !!

ಶೌರ್ಯ ಪ್ರಶಸ್ತಿ ವಿಜೇತ ಬಾಲಕನ ಔದಾರ್ಯ

ಕ.ಪ್ರ. ವಾರ್ತೆ, ಮೈಸೂರು, ಫೆ.6ನೋಡಲು ಈತ ಬಾಲಕನಾದರೂ, ಈತನ ಆದರ್ಶ, ಮಾನವೀಯತೆ ಯಾರಿಗಿಂತಲೂ ಕಡಿಮೆಯೇನಿಲ್ಲ.ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ಅಂಗವಿಕಲೆಯೊಬ್ಬರನ್ನು ರಕ್ಷಿಸಿ ಪ್ರಧಾನಮಂತ್ರಿಗಳ ಶೌರ್ಯ ಪ್ರಶಸ್ತಿ ಪಡೆದ ಬಾಲಕನೀಗ ಮತ್ತೊಂದು ಸಮಾಜಮುಖಿ ಕೆಲಸದತ್ತ ಹೊರಳಿದ್ದಾನೆ.ಈ ಬಾಲಕ ಬೇರಾರೂ ಅಲ್ಲ. ಮೈಸೂರು ಜಿಲ್ಲೆಯ ಸಾಲಿಗ್ರಾಮದ ಮನೋಜ್. ಪ್ರಧಾನಮಂತ್ರಿಗಳ ಶೌರ್ಯ ಪ್ರಶಸ್ತಿ ಪಡೆದ ಮನೋಜ್, ಅದರಿಂದ ಬಂದ 1 ಲಕ್ಷ ಹಣದ ಪೈಕಿ ಶೇ.50 ರಷ್ಟನ್ನು, ಅಂದರೆ 50 ಸಾವಿರ ಹಣವನ್ನು ಅಂಗವಿಕಲರಿಗೆ ವಿನಿಯೋಗಕ್ಕೆ ನೀಡಲು ಮುಂದಾಗಿದ್ದಾನೆ. ಅಂಗವಿಕಲೆಯ ಜೀವ ಉಳಿಸಿದ್ದರಿಂದಲೇ ಈ ಹಣ ಬಂದಿದ್ದು, ಅಂಗವಿಕಲರಿಗೇ ಉಪಯೋಗವಾಲಿ ಎಂಬುದು ಮನೋಜನ ಆಶಯ.ಇದಕ್ಕಾಗಿ ಮನೋಜ್ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಮೊರೆ ಹೋಗಿದ್ದು ಮೈಸೂರಿನಲ್ಲಿ ಅತ್ಯಂತ ಬಡ ಅಂಗವಿಕಲ ಮಕ್ಕಳಿರುವ ಶಾಲೆಗೆ ಈ ಹಣ ನೀಡಬೇಕೆಂದು ನಿರ್ಧರಿಸಿದ್ದಾನೆ. ಬಾಲಕನ ಈ ಆಸೆಗೆ ಪೋಷಕರೂ ನೀರೆರೆದಿದ್ದಾರೆ.ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯ ಹಂಚಿಕೊಂಡ ಮನೋಜ್, ಈ ಹಣದಲ್ಲಿ ಅರ್ಧ ಪಾಲನ್ನು ಅಂಧ ಮಕ್ಕಳ ಶಾಲೆಗೆ ನೀಡಿ, ಉಳಿದ ಭಾಗವನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳುತ್ತೇನೆ. ಮುಂದೆ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಐಎಎಸ್ ಅಧಿಕಾರಿ ಅಥವಾ ವೈದ್ಯ ಆಗಬೇಕು ಎಂಬ ಕನಸಿದೆ ಎಂದು ತಿಳಿಸಿದನು.ಜೀವ ಉಳಿಸಿದ್ದ ಮನೋಜ್: ಕನ್ನಡ ನಾಡಿನ ಜೀವನದಿ ಕಾವೇರಿ ಹರಿಯುವ ನಾಡು ಸಮೃದ್ಧಿ. ಈ ಜೀವ ಜಲದಲ್ಲಿ ಮಹಾತ್ಮನ ಅಸ್ತಿ ವಿಲೀನವಾಗಿರುವುದು ಪವಿತ್ರತೆಯ ದ್ಯೋತಕವಾಗಿದೆ. ಇಂಥ ಜಾಗದಲ್ಲಿ ಅನೇಕ ಅವಘಡಗಳು ಸಂಭವಿಸಿದ್ದರೂ 2012ರಲ್ಲಿ ನಡೆದ ಒಂದು ಘಟನೆ ಮಾನವೀಯ ನೆಲೆಗೆ, ಶೌರ್ಯಕ್ಕೆ ಪ್ರತೀಕವಾಗಿ ಎಲ್ಲರ ಹುಬ್ಬೇರಿಸಿತು.ಅಂದು 2012ರ ಸೆ.2. ದಂಪತಿ ತಮ್ಮ ಮಗನ ಜತೆ ಕಾವೇರಿ ತಟದಲ್ಲಿರುವ ಶ್ರೀರಂಗಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು.    ಒಳ ಹೋಗಬೇಕಿದ್ದ ಆ ಬಾಲಕ ಯಾಕೋ ಹಿಂದೇಟು ಹಾಕಿ ಕಾವೇರಿ ಮಡಿಲಲ್ಲಿ ಈಜಲು ತೆರಳಿದ. ಜಲಕ್ರೀಡೆಯಲ್ಲಿ ಮಗ್ನನಾಗಿದ್ದಾಗ ತರಂಗಗಳ ನಡುವೆ ಆರ್ತನಾದವೊಂದು ಕೇಳಿ ಬಂತು. ನೋಡ ನೋಡುತ್ತಿದ್ದಂತೆ ಹೆಣ್ಣು ಜೀವ ನೀರಿನಲ್ಲಿ ಒದ್ದಾಡುತ್ತಿತ್ತು.ಆ ದನಿಯನ್ನು ಕೇಳಿದ ಆ ಬಾಲಕನಿಗೆ ಜೀವ ಧಸಕ್ಕೆಂದಿತು. ಆಕೆಯನ್ನು ಕಾಪಾಡಬೇಕೆಂದು ಹಟ ತೊಟ್ಟವನ ವಯಸ್ಸು 12. ಹೆಸರು ಮನೋಜ. ತಕ್ಷಣ ಆಕೆಯ ಬಳಿಗೆ ತೆರಳಿದ. ಅವಳ ಜಡೆ ಹಿಡಿದು, ಎಳೆದು ತಂದು ನದಿಯ ತಟಕ್ಕೆ ಮುಟ್ಟಿಸಿದ. ಆಕೆಯ ಉಸಿರು ನಿಧಾನವಾಗಿತ್ತು. ಚೈತನ್ಯವಿಲ್ಲದಂತೆ ಮಲಗಿದ್ದ ಅವಳು ಅಂಗವಿಕಲೆಯಾಗಿದ್ದಳು.ಹೀಗೆ ಚಿಕ್ಕ ವಯಸ್ಸಿನಲ್ಲಿಯೇ ಶೌರ್ಯ ಪ್ರದರ್ಶಿಸಿದ ಆತನಿಗೆ ಗಣರಾಜ್ಯೋತ್ಸವ ಸಂಭ್ರಮದಂದು ಭಾರತ ಸರ್ಕಾರ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತು. ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಂದ ಚಿನ್ನದ ಪದಕ, ಪ್ರಶಸ್ತಿ, 1 ಲಕ್ಷ ನಗದು ಪಡೆದು ಬಂದವನಿಗೆ ಕನ್ನಡ ನಾಡಿನಲ್ಲಿ ಹರ್ಷೋದ್ಘಾರ ಮೊಳಗಿತು. ಅಭಿನಂದನೆಯ ಮಹಾಪೂರವೇ ಹರಿದುಬಂತು. ತಂದೆ- ತಾಯಿಯರ ಆನಂದ ಪರಾಕಾಷ್ಠೆ ತಲುಪಿತ್ತು.ಇಷ್ಟಕ್ಕೆ ನಿಲ್ಲದ ಮನೋಜನ ಯಶೋಗಾಥೆ ಇದೀಗ ಮತ್ತೊಂದು ಹೊರಳು ಪಡೆದುಕೊಂಡಿದೆ. ತನಗೆ ಸರ್ಕಾರ ನೀಡಿದ ಹಣದಲ್ಲಿ ಶೇ.50ರಷ್ಟನ್ನು ಸಮಾಜ ಸೇವೆಗೆ ನೀಡಲು ಮುಂದಾಗಿರುವುದು ಶ್ಲಾಘನೀಯ ವಿಷಯವೇ ಸರಿ.ಯಾರೀತ?ಹೆಸರು: ಎಸ್.ಎಸ್. ಮನೋಜ್ತಂದೆ: ಎಸ್.ಟಿ. ರಾಜಶೇಖರ್ತಾಯಿ: ಎಸ್.ಕೆ. ಆರತಿ ಶಾಲೆ: ಜವಾಹರ್ ನವೋದಯ ಶಾಲೆ, ಗದ್ದಿಗೆವಿಳಾಸ: ಸಾಲಿಗ್ರಾಮ, ಕೆ.ಆರ್. ನಗರ ತಾಲೂಕು, ಮೊ. 95917 23706