ಡಿಎಲ್ಎಫ್ನಿಂದ ಭೂಕಬಳಿಕೆ
‘19 ಎಕರೆ 37 ಗುಂಟೆ ಎಕರೆ ಸರ್ಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಭೂಪರಿವರ್ತನೆ ಮಾಡಿಸಲು ಕೆ.ಕಿರಣ್ ಮತ್ತು ಎಚ್.ಆರ್.ರವಿಚಂದ್ರ ಎಂಬುವರು ಕಂಪೆನಿಗೆ ನೆರವಾಗಿದ್ದಾರೆ’…
ಬೆಂಗಳೂರು: ‘ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರಿನಲ್ಲಿನ 33 ಎಕರೆ 37 ಗುಂಟೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಭೂಪರಿವರ್ತನೆ ಮಾಡಿ ಹಾಗೂ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಡಿಎಲ್ಎಫ್ ಸಂಸ್ಥೆಯು ವೆಸ್ಟ್ಎಂಡ್ ಹೈಟ್ಸ್ ವಸತಿ ಸಮುಚ್ಚಯ ನಿರ್ಮಿಸಿದೆ’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಬೇಗೂರು ಗ್ರಾಮದಲ್ಲಿ ಗುಂಡುತೋಪು, ಸ್ಮಶಾನ, ಗೋಮಾಳ, ಬಂಡಿ ದಾರಿ ಮತ್ತು ಮೀಸಲುಅರಣ್ಯ ಪ್ರದೇಶವಿದೆ. ವಸತಿಸಮುಚ್ಚಯ ನಿರ್ಮಿಸಲು ಅನೇಕ ರೈತರಿಂದ 60 ಎಕರೆ ಪ್ರದೇಶವನ್ನು ಡಿಎಲ್ಎಫ್ ಪಾಲುದಾರಿಕೆಯ ಅನ್ನಾಬೆಲ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ಕಂಪೆನಿಯು ₹ 111.26 ಕೋಟಿಗೆ ಖರೀದಿಸಿದೆ’ ಎಂದು ಅವರು ಹೇಳಿದರು.
‘ಇದರಲ್ಲಿ 19 ಎಕರೆ 37 ಗುಂಟೆ ಎಕರೆ ಸರ್ಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಭೂಪರಿವರ್ತನೆ ಮಾಡಿಸಲು ಕೆ.ಕಿರಣ್ ಮತ್ತು ಎಚ್.ಆರ್.ರವಿಚಂದ್ರ ಎಂಬುವರು ಕಂಪೆನಿಗೆ ನೆರವಾಗಿದ್ದಾರೆ. ಇದರ ಮಾರುಕಟ್ಟೆ ಬೆಲೆ ₹ 500 ಕೋಟಿ ಯಷ್ಟಿದೆ. ಇದಲ್ಲದೆ, ಕರಾರು ಪತ್ರದಲ್ಲಿ ಉಲ್ಲೇಖವಾಗಿರದ 14 ಎಕರೆ ಸರ್ಕಾರಿ ಜಮೀನನ್ನು ಕಂಪೆನಿ ಒತ್ತುವರಿ ಮಾಡಿ ಕೊಂಡಿದೆ. ಇದು ಸುಮಾರು ₹ 350 ಕೋಟಿ ಬೆಳೆಬಾಳುತ್ತದೆ. ಈ ಅಕ್ರಮಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಧಿಕಾರಿಗಳು ಸಹಕರಿಸಿದ್ದಾರೆ.
ಸಂಸ್ಥೆಯ ಜಮೀನು 60 ಎಕರೆ ಇದ್ದರೂ 74 ಎಕರೆಗಳಷ್ಟು ಪ್ರದೇಶಕ್ಕೆ ಬೇಲಿ ಹಾಕಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಬೇಗೂರು ಕೆರೆಯಿಂದ ಹುಳಿಮಾವು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯನ್ನು ಸಂಸ್ಥೆ ಕಬಳಿಸಿದೆ. ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸೇರಿದ 3 ಎಕರೆ 26 ಗುಂಟೆ , ಗುಂಡುತೋಪಿನ 1 ಎಕರೆ 26 ಗುಂಟೆ, ಮೀಸಲು ಅರಣ್ಯ ಪ್ರದೇಶದ 1 ಎಕರೆ 17 ಗುಂಟೆ, ಸ್ಮಶಾನಕ್ಕೆ ಸೇರಿದ 1 ಎಕರೆ 25 ಗುಂಟೆ ಜಾಗವನ್ನು ಒತ್ತುವರಿ ಮಾಡಿದ್ದಾರೆ’ ಎಂದು ಅವರು ಆರೋಪಿಸಿದರು.
‘ಸಂಸ್ಥೆಯ ಅಕ್ರಮದ ವಿರುದ್ಧ ಭೂ ಕಬಳಿಕೆ ನಿಗ್ರಹ ವಿಶೇಷ ನ್ಯಾಯಾಲಯ, ಎಸಿಎಂಎಂ ನ್ಯಾಯಾಲಯ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ಮಹಾನಗರ ಕಾರ್ಯಪಡೆ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದೇನೆ’ ಎಂದರು.
‘ಈ ಭೂಹಗರಣದ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಅವರು ಆದೇಶ ಮಾಡಬೇಕು. ಅಕ್ರಮವಾಗಿ ಭೂಪರಿವರ್ತನೆಗೆ ಅನುವು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
‘ಆರೋಪದಲ್ಲಿ ಹುರುಳಿಲ್ಲ’
‘ವೆಸ್ಟ್ಎಂಡ್ ಹೈಟ್ಸ್ ಅಪಾರ್ಟ್ ಮೆಂಟ್ ಸಮುಚ್ಚಯದ ಕಾಮಗಾರಿ ಕಳೆದ ವರ್ಷವೇ ಪೂರ್ಣಗೊಂಡಿದೆ. ಅದರ ಫ್ಲ್ಯಾಟ್ಗಳೆಲ್ಲವೂ ಮಾರಾಟವಾಗಿವೆ. ಪಟ್ಟಭದ್ರ ಹಿತಾಸಕ್ತಿಗಳು ಈಗ ಆಧಾರವಿಲ್ಲದ ಆರೋಪ ಮಾಡುತ್ತಿರುವುದನ್ನು ಕೇಳಿನಗು ಬರುತ್ತಿದೆ’ ಎಂದು ಡಿಎಲ್ಎಫ್ ಸಂಸ್ಥೆಯ ವಕ್ತಾರ ದಿವ್ಯಾ ಪುರಿ ಆರೋಪವನ್ನು ನಿರಾಕರಿಸಿದರು.