BBMP CAN ISSUE KATHA ONLY FOR THE FULL EXTENT OF THE SCHEDULE DISPLAYED IN THE OM COPY OF CONVERSION ORDER AND NOT FOR THE SITES BIFURCATED OR INDIVIDUAL SITES FOR SITES CARVED OUT OF SUCH LANDS OR FORMED IN THE DC CONVERTED LAYOUTS – COMMISSIONER, BBMP
A PRESS REPORT IN THE LEADING KANNADA DAILY – PRAJAVANI –
ಬೆಂಗಳೂರು: ‘ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆಯಾದ ಏಕ ನಿವೇಶನಗಳಿಂದ ಮಾತ್ರ ಅಭಿವೃದ್ಧಿ ಶುಲ್ಕ ಸಂಗ್ರಹಿಸಿ, ಅಂತಹ ನಿವೇಶನಗಳಿಗೆ ಅಧಿಕೃತ ಖಾತೆ ಮಾಡಿಕೊಡಲಾಗುವುದು’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎಂ.ಲಕ್ಷ್ಮಿನಾರಾಯಣ ತಿಳಿಸಿದರು.
ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಸೋಮವಾರ ಅಭಿವೃದ್ಧಿ ಶುಲ್ಕ ಸಂಗ್ರಹಣೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆದ ಬಳಿಕ ಅವರು ಈ ಸ್ಪಷ್ಟನೆ ನೀಡಿದರು. ‘ಭೂಪರಿವರ್ತನೆಯಾದ ನಿವೇಶನ ವಿಂಗಡಣೆಯಾಗಿದ್ದರೆ ಅಥವಾ ಅದರಲ್ಲಿ ಕಟ್ಟಡ ನಿರ್ಮಿಸಿದ್ದರೆ ಅಂತಹ ನಿವೇಶನದಾರರು ಅಧಿಕೃತ ಖಾತೆ ಮಾಡಿಸಿಕೊಳ್ಳಲು ಅಕ್ರಮ–ಸಕ್ರಮ ಯೋಜನೆ ಜಾರಿಗೆ ಬರುವವರೆಗೆ ಕಾಯಬೇಕು’ ಎಂದು ಹೇಳಿದರು.
‘ರಾಜ್ಯ ಸರ್ಕಾರ ಅಕ್ರಮ–ಸಕ್ರಮ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದರೂ ಹೈಕೋರ್ಟ್ನಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ವಿಚಾರಣೆ ನಡೆಯುತ್ತಿರುವ ಕಾರಣ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗಿದೆ’ ಎಂದು ವಿವರಿಸಿದರು.
‘ಭೂಪರಿವರ್ತನೆಯಾದ ಏಕ ನಿವೇಶನಗಳಿಗಲ್ಲದೆ ಬೇರೆ ನಿವೇಶನಗಳಿಗೂ ಖಾತೆ ನೀಡಲು ಮುಂದಾದರೆ ಸರ್ಕಾರದ ಯೋಜನೆಗೆ ವಿರುದ್ಧವಾಗಿ ಬಿಬಿಎಂಪಿ ಕ್ರಮ ಕೈಗೊಂಡಂತೆ ಆಗುತ್ತದೆ. ಹೀಗಾಗಿ ಉಳಿದ ನಿವೇಶನಗಳಿಗೆ ಸಂಬಂಧಿಸಿದಂತೆ ಈ ಹಂತದಲ್ಲಿ ಅಭಿವೃದ್ಧಿ ಶುಲ್ಕ ಪಡೆಯಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಮೇಯರ್ ಬಿ.ಎಸ್. ಸತ್ಯನಾರಾಯಣ, ‘ಭೂಪರಿವರ್ತನೆಯಾದ ಭೂಮಿಯಲ್ಲಿ ಹಂಚಿಕೆ ಮಾಡಲಾದ ವೈಯಕ್ತಿಕ ನಿವೇಶನಗಳಿಗೂ ಖಾತೆ ನೀಡಲು ಅನುಮತಿ ನೀಡುವಂತೆ ಒತ್ತಾಯಿಸಲು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕರೆದೊಯ್ಯಲಾಗುವುದು’ ಎಂದು ಪ್ರಕಟಿಸಿದರು.
ಚರ್ಚೆಗೆ ನಾಂದಿ ಹಾಡಿದ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಶ್ವತ್ಥನಾರಾಯಣಗೌಡ, ‘ಮುಖ್ಯಮಂತ್ರಿಗಳು ಬಿಬಿಎಂಪಿಯಿಂದ ₨ 4,000 ಕೋಟಿ ತೆರಿಗೆ ಸಂಗ್ರಹಿಸಲು ಸಾಧ್ಯವಿದೆ ಎಂದು ಬಾರಿ, ಬಾರಿ ಹೇಳುತ್ತಿದ್ದಾರೆ. ಕೌನ್ಸಿಲ್ ಸಭೆಯಲ್ಲಿ ನಾಲ್ಕು ತಿಂಗಳ ಹಿಂದೆಯೇ ಅಭಿವೃದ್ಧಿ ಶುಲ್ಕ ಸಂಗ್ರಹಿಸಲು ನಿರ್ಣಯ ಕೈಗೊಂಡಿದ್ದೇವೆ. ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾದರೆ ವರಮಾನ ಸಂಗ್ರಹಣೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
‘ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳುತ್ತಲೇ ಇದ್ದೇವೆ. ಕಂದಾಯ ವಿಭಾಗ ಮಾತ್ರ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ಜಡತ್ವದಿಂದ ಪಾಲಿಕೆಗೆ ದುಡ್ಡೇ ಬರುತ್ತಿಲ್ಲ. ಹಿಡಿದಿರುವ ಜಡ ಬಿಡಿಸಲು ಅವರನ್ನೆಲ್ಲ ಪ್ರಕೃತಿ ಚಿಕಿತ್ಸಾಲಯಕ್ಕೆ ಕಳುಹಿಸಬೇಕು’ ಎಂದು ವ್ಯಂಗ್ಯವಾಡಿದರು. ಬಿಜೆಪಿಯ ಎನ್. ನಾಗರಾಜ್, ‘ಪ್ರತಿ ವಿಭಾಗದಲ್ಲೂ ಒಂದೊಂದು ವಾರ ವಿಶೇಷ ತೆರಿಗೆ ಸಂಗ್ರಹ ಮೇಳ ಮಾಡಬೇಕು. ಅಭಿವೃದ್ಧಿ ಶುಲ್ಕ ಸೇರಿದಂತೆ ಎಲ್ಲ ತೆರಿಗೆಯನ್ನೂ ಈ ಮೇಳದಲ್ಲಿ ಸಂಗ್ರಹ ಮಾಡಬೇಕು.
ಇದರಿಂದ ಬಂದ ವರಮಾನವನ್ನು ಗುತ್ತಿಗೆದಾರರ ಬಾಕಿ ತೀರಿಸುವ ಜತೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬಳಸಬೇಕು’ ಎಂದು ಸಲಹೆ ನೀಡಿದರು. ವಿರೋಧ ಪಕ್ಷದ ನಾಯಕ ಮಂಜುನಾಥ ರೆಡ್ಡಿ, ‘ಸರ್ಕಾರದ ಮಾರ್ಗಸೂಚಿ ದರದಂತೆ ಅಭಿವೃದ್ಧಿ ಶುಲ್ಕ ಭರಿಸಲಾಗುವುದು ಎಂಬ ಪ್ರಮಾಣ ಪತ್ರ ಪಡೆದು ನೂರಾರು ನಿವೇಶನಗಳಿಗೆ ಖಾತೆ ನೀಡಲಾಗಿದೆ.
ಅಂತಹ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಿದ ಬಿಲ್ಡರ್ಗಳು ಮನೆಗಳನ್ನು ಮಾರಾಟ ಮಾಡಿ ಜಾಗ ಖಾಲಿ ಮಾಡಿದ್ದಾರೆ. ಆ ನಿವೇಶನಗಳ ಅಭಿವೃದ್ಧಿ ಶುಲ್ಕವನ್ನು ಯಾರಿಂದ ಭರಿಸಲಾಗುತ್ತದೆ’ ಎಂದು ಪ್ರಶ್ನಿಸಿದರು. ‘ಕಟ್ಟಡಗಳಲ್ಲಿ ವಾಸವಾದ ವ್ಯಕ್ತಿಗಳಿಂದಲೇ ಅಭಿವೃದ್ಧಿ ಶುಲ್ಕ ಸಂಗ್ರಹ ಮಾಡಲಾಗುವುದು’ ಎಂದು ಕಂದಾಯ ವಿಭಾಗದ ಉಪ ಆಯುಕ್ತ ಐ.ರಮಾಕಾಂತ್ ತಿಳಿಸಿದರು.
ಮೂರು ತಿಂಗಳಲ್ಲಿ ಪಿಐಡಿ:‘ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಮೂಲಕ ನಗರದ ಪ್ರತಿಯೊಂದು ಆಸ್ತಿಗೂ ಗುರುತಿನ ಸಂಖ್ಯೆ (ಪಿಐಡಿ) ನೀಡುವ ಪ್ರಕ್ರಿಯೆಯನ್ನು ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಆಯುಕ್ತರು ಭರವಸೆ ನೀಡಿದರು. ‘ಪ್ರತಿ ತಿಂಗಳು ಸಾಧಿಸಲಾದ ಪ್ರಗತಿಯ ವರದಿಯನ್ನು ಅಧಿಕಾರಿಗಳಿಂದ ಪಡೆಯಲಿದ್ದೇನೆ’ ಎಂದು ಹೇಳಿದರು.
ಬಿಜೆಪಿಯ ಮಂಜುನಾಥ್ರಾಜು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಪಿಐಡಿ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪೂರಕ ಮಾಹಿತಿ ನೀಡಿದ ರಮಾಕಾಂತ್, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 16,19,363 ಆಸ್ತಿಗಳನ್ನು ಗುರುತಿಸಲಾಗಿದ್ದು, 13,85,552 ಆಸ್ತಿಗಳಿಗೆ ಪಿಐಡಿ ನೀಡಲಾಗಿದೆ’ ಎಂದು ವಿವರಿಸಿದರು.
‘ಹಳೆಯ 75 ವಾರ್ಡ್ಗಳಲ್ಲಿ ಪಿಐಡಿ ನೀಡುವ ಪ್ರಕ್ರಿಯೆ ಈಗಾಗಲೇ ಶೇ 100ರಷ್ಟು ಪೂರ್ಣಗೊಂಡಿದೆ. ಹೊಸ ವಾರ್ಡ್ಗಳಲ್ಲಿ ಕೆಲಸ ಬಾಕಿ ಇದೆ. ಮಹದೇವಪುರ, ರಾಜರಾಜೇಶ್ವರಿನಗರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ ಬಹುತೇಕ ಆಸ್ತಿಗಳಿಗೆ ಇನ್ನೂ ಪಿಐಡಿ ನೀಡಬೇಕಿದೆ. ಗ್ರಾಮಗಳ ದಾಖಲೆ ಸರಿಯಾಗಿ ಇಲ್ಲದೆ ಇರುವುದು ಮತ್ತು ಕೌಶಲಪೂರ್ಣ ಅಧಿಕಾರಿಗಳ ಕೊರತೆಯಿಂದ ಕೆಲಸ ಕುಂಟುತ್ತಾ ಸಾಗಿದೆ’ ಎಂದು ಮಾಹಿತಿ ನೀಡಿದರು.
‘ಪ್ರತಿ ತಿಂಗಳು 2000 ಕಟ್ಟಡಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ಕಟ್ಟಡದ ವಿಸ್ತೀರ್ಣಕ್ಕೂ, ಮಾಲೀಕರು ಕೊಟ್ಟ ಮಾಹಿತಿಗೂ ಇರುವ ವ್ಯತ್ಯಾಸವನ್ನು ಪತ್ತೆ ಹಚ್ಚಲು ಸಹಾಯಕ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಮುಖ್ಯ ಎಂಜಿನಿಯರ್ (ರಸ್ತೆಗಳು ಮತ್ತು ಮೂಲಸೌಕರ್ಯ) ಎಸ್.ಸೋಮಶೇಖರ್ ಹೇಳಿದರು.
‘ನಗರದ 1,049 ಕಿ.ಮೀ. ಉದ್ದದ ಮುಖ್ಯ ರಸ್ತೆಗಳ ಇತಿಹಾಸದ ನಿರ್ವಹಣೆ ವ್ಯವಸ್ಥೆಯನ್ನು ಇನ್ನು ಎರಡು ತಿಂಗಳಲ್ಲಿ ಸಂಪೂರ್ಣವಾಗಿ ಸನ್ನದ್ಧಗೊಳಿಸಲಾಗುವುದು. ಉಪರಸ್ತೆಗಳ ಇತಿಹಾಸ ನಿರ್ವಹಣೆಗೆ ಸಂಬಂಧಿಸಿದಂತೆ ವಲಯ ಅಧಿಕಾರಿಗಳ ಸಭೆ ಕರೆಯಲಾಗುವುದು’ ಎಂದು ತಿಳಿಸಿದರು.
You must be logged in to post a comment.